ಮುಂಬಯಿ: ಹಳೆಯ 500, 1000 ರೂ ನೋಟು ಅಮಾನ್ಯವಾಗಿ 55 ದಿನ ಕಳೆದರೂ ನಗದು ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ, ಆರ್ಬಿಐ ಗ್ರಾಮೀಣ ಭಾಗದ ಜನರ ನೆರವಿಗೆ ಮುಂದಾಗಿದೆ. ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಶೇ. 40ರಷ್ಟನ್ನು ಗ್ರಾಮೀಣ ಭಾಗಗಳಲ್ಲಿ ಪೂರೈಸುವಂತೆ ಆರ್ಬಿಐ ಎಲ್ಲಾ ಬ್ಯಾಂಕ್ಗಳಿಗೂ ನಿರ್ದೇಶನ ನೀಡಿದೆ.
ಹಳೆ ನೋಟು ಜಮೆ ಹಾಗೂ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ಮೋದಿ ನೀಡಿದ್ದ ಗಡುವು ಡಿ.30ಕ್ಕೆ ಮುಗಿದರೂ ದೇಶದ ಬಹುತೇಕ ಭಾಗಗಳಲ್ಲಿ ನಗದು ಸಮಸ್ಯೆ ಇತ್ಯರ್ಥವಾಗಿಲ್ಲ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಜನರು ತೀವ್ರ ನಗದು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ಖಾತೆಗಳಿಂದ ಹಣ ಹಿಂಪಡೆಯಲು ವಿಧಿಸಿದ್ದ ವಾರಕ್ಕೆ 24,000 ರೂ. ಮಿತಿಯನ್ನು ಮುಂದುವರಿಸಿದೆ.
ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಗ್ರಾಮೀಣ ಭಾಗಗಳಿಗೆ ನೋಟು ಪೂರೈಸದಿರುವುದನ್ನು ಗಮನಿಸಿ ಆರ್ಬಿಐ ಈ ಸೂಚನೆ ಹೊರಡಿಸಿದೆ.
''ಹೊಸದಾಗಿ ಪೂರೈಕೆಯಾಗುವ ನೋಟುಗಳಲ್ಲಿ ಶೇ. 40ರಷ್ಟು ಭಾಗವನ್ನು ಗ್ರಾಮೀಣ ಪ್ರದೇಶದ ಶಾಖೆಗಳಿಗೆ ತಲುಪಿಸುವಂತೆ ಬ್ಯಾಂಕ್ಗಳು ತಮ್ಮ ಕರೆನ್ಸಿ ಚೆಸ್ಟ್ಗಳಿಗೆ ಸೂಚಿಸಬೇಕು. ಜಿಲ್ಲಾ ಸಹಕಾರ ಬ್ಯಾಂಕ್ಗಳು, ಅಂಚೆ ಕಚೇರಿಗಳು ಮತ್ತು ಎಟಿಎಂಗಳಿಗೂ ಹೆಚ್ಚಿನ ಕರೆನ್ಸಿ ಪೂರೈಕೆಯಾಗಬೇಕು,'' ಎಂದು ಆರ್ಬಿಐ ತಿಳಿಸಿದೆ.