Please enable javascript.Geetha Nagabhushan,ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ - kannada-veteran-novelist-geetha-nagabhushan-passed away - Vijay Karnataka

ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ

Vijaya Karnataka Web | 28 Jun 2020, 11:48 pm
Subscribe

ಕನ್ನಡದ ಹಿರಿಯ ಕಾದಂಬರಿಗಾರ್ತಿ ಗೀತಾ ನಾಗಭೂಷಣ ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ​​ಗದಗದಲ್ಲಿ ಆಯೋಜಿಸಿದ್ದ ​76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೀತಾ ನಾಗಭೂಷಣ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ.

kannada veteran novelist geetha nagabhushan passed away
ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ
ಕಲಬುರಗಿ: ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ಪ್ರಗತಿಪರ ಕಾದಂಬರಿ ಮತ್ತು ಕಥೆಗಳ ಮೂಲಕ ಕನ್ನಡಿಗರ ಮನಸಲ್ಲಿ ಸ್ಥಾನ ಪಡೆದಿದ್ದ ಕಲಬುರಗಿಯ ತಮ್ಮ ಸ್ವಗೃಹದಲ್ಲಿ ಭಾನುವಾರ ಕೊನೆಯುಸಿರಳೆದಿದ್ದಾರೆ.

ಗದಗದಲ್ಲಿ ಆಯೋಜಿಸಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೀತಾ ನಾಗಭೂಷಣ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಹೆಗ್ಗಳಿಕೆ ಗೀತಾ ನಾಗಭೂಷಣ ಹೊಂದಿದ್ದಾರೆ. ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ), ಜ್ವಲಂತ (ಕಥಾಸಂಗ್ರಹ), ಜೋಗಿಣಿ (ನಾಟಕ), ನನ್ನ ಚೆಲುವು ನಿನ್ನ ಒಲವು ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಕಲಬುರಗಿಯ ಬಡಕುಟುಂಬದ ಶಾಂತಪ್ಪ-ಶರಣಮ್ಮ ದಂಪತಿಗಳಿಗೆ 1942 ಮಾರ್ಚ್‌ 25ರಂದು ಗೀತಾ ನಾಗಭೂಷಣ ಜನಿಸಿದ್ದರು. ಮೆಟ್ರಿಕ್ ಮುಗಿಸಿದ ನಂತರ ಕೆಲ ಕಾಲ ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಬಿಎಡ್ ಮತ್ತು ಎಂಎ ಪದವಿಯನ್ನು ಗಳಿಸಿದ್ದರು.

ವಿದ್ಯಾಭ್ಯಾಸದ ವೇಳೆಯಲ್ಲಿ ಉದ್ಯೋಗ ಮಾಡುತ್ತಿದ್ದ ಗೀತಾ ನಾಗಭೂಷಣ ಎಂಎ ಪದವಿ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 3 ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ