1 - ದೇಶದ ಮೊಟ್ಟ ಮೊದಲ ಕೊರೊನಾ ಲಸಿಕೆಗೆ ಡಿಸಿಜಿಐ ಸಮ್ಮತಿ!
ದೇಶದ ಮೊಟ್ಟ ಮೊದಲ ಕೊರೊನಾ ವೈರಸ್ ಲಸಿಕೆಗೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗಳ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ,ಈ ಎರಡೂ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಶೀಘ್ರದಲ್ಲೇ ಈ ಲಸಿಕೆ ಹಂಚಿಕೆ ಹಾಗೂ ವಿತರಣೆಗೆ ಮುಂದಡಿ ಇಡಲಾಗುವುದು ಎಂದು ಡಿಸಿಜಿಐ ಸ್ಪಷ್ಟಪಡಿಸಿದೆ. ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಜಿಐ, ಕೇಂದ್ರ ತಜ್ಞರ ಸಮಿತಿ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ತಜ್ಞ ಸಮಿತಿ ಶಿಫಾರಸಿನ ಅನ್ವಯ ನಾವು ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಅನುಮತಿ ನೀಡಿದ್ದು, ಸರ್ಕಾರ ಈಗಾಗಲೇ ಇವುಗಳ ಹಂಚಿಕೆ ಹಾಗೂ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಡಿಸಿಜಿಐ ಮುಖ್ಯಸ್ಥರು ಹೇಳಿದ್ದಾರೆ.
ಕೊರೊನಾ ವೈರಸ್ಗೆ ಇದೆ ಲಸಿಕೆ.. ಆದ್ರೂ ಇರಲಿ ಎಚ್ಚರಿಕೆ..! ಪ್ರಧಾನಿ ಮೋದಿ ಕರೆ..
2 - ಡಿಜಿಸಿಐ ನಿರ್ಧಾರಕ್ಕೆ ಪ್ರಧಾನಿ ಸ್ವಾಗತ: ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ
ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ ನಿರ್ಧಾರವನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, ಇದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶವಾಸಿಗಳು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಾಗಿದೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆಗೆ ಅನುಮತಿ ನೀಡಿರುವ ಡಿಸಿಜಿಐ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಲಸಿಕೆ ಲಭ್ಯತೆಗಾಗಿ ಶ್ರಮಿಸಿದ ವೈದ್ಯ ವಿಜ್ಞಾನಿಗಳ ಶ್ರಮವನ್ನು ದೇಶ ಸದಾ ಸ್ಮರಿಸಲಿದೆ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ ವಿರುದ್ಧದ ದಿಟ್ಟ ಹೋರಾಟದಲ್ಲಿ ಭಾರತ ಅತ್ಯಂತ ಮಹತ್ವದ ಘಟ್ಟ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರದೇಶದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್, ಭಾರತದ ಈ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿದರು.
ಭಾರತಕ್ಕೆ ಸಿಕ್ತು ಲಸಿಕೆ ಬಲ: ದೇಶದ ಮೊಟ್ಟ ಮೊದಲ ಕೊರೊನಾ ಲಸಿಕೆಗೆ ಡಿಸಿಜಿಐ ಸಮ್ಮತಿ!
3 - ಕೋವಿಡ್ ಲಸಿಕೆ ವಿಚಾರದಲ್ಲಿ ಪಾಲಿಟಿಕ್ಸ್ ಬೇಡ: ಡಿಸಿಎಂ ಅಶ್ವತ್ಥನಾರಾಯಣ
ಕೋವಿಡ್-19 ಲಸಿಕೆ ನೀಡುವ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಚಿತ್ರಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಲಸಿಕೆ ನೀಡುವ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರಕ್ಕೆ ರಚನಾತ್ಮಕ- ಮೌಲ್ಯಯುತ ಸಲಹೆಗಳನ್ನು ನೀಡಬೇಕು ಎಂದು ಕೋರಿದರು.
ಪ್ರತಿಯೊಂದರಲ್ಲಿಯೂ ರಾಜಕೀಯ ಹುಡುಕುವುದು ಕೆಲವರಿಗೆ ಅಂಟಿರುವ ಜಾಡ್ಯ. ಅದಕ್ಕೇನು ಮಾಡಲು ಸಾಧ್ಯ? ಸಹಕಾರ ಕೊಡಿ ಎಂದಷ್ಟೇ ಸರಕಾರ ಮನವಿ ಮಾಡಲು ಸಾಧ್ಯವಷ್ಟೇ ಎಂದರು.
ಹೊಸ ವರ್ಷ ಮುನ್ನಾ ದಿನ ರಾತ್ರಿ 9ರವರೆಗೆ ಕಡತ ವಿಲೇವಾರಿ ಮಾಡಿದ ಡಿಸಿಎಂ ಅಶ್ವತ್ಥನಾರಾಯಣ
4 - ಬಿಜೆಪಿಯು ಕಪಟ ಮೈತ್ರಿ ನಾಟಕ ನಿಲ್ಲಿಸಲಿ: ಎಚ್.ಡಿ. ಕುಮಾರಸ್ವಾಮಿ!
ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಇದಕ್ಕಾಗಿಯೇ ಜೆಡಿಎಸ್ ಪಕ್ಷ ಎನ್ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಅವರೊಂದಿಗೆ ರಾಜ್ಯದ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯ ನನಗಿದೆ ಎಂಬುದು ನೆನಪಿರಲಿ. ಯಡಿಯೂರಪ್ಪ ಹಿರಿಯರು ಎಂಬ ಗೌರವ ಕೂಡ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ ಎಂದು ತಿಳಿಸಿದ್ದಾರೆ.
ಕನ್ನಡಿಗರಿಗೇ ಎಚ್ಚರಿಕೆ ನೀಡುವ ಧೈರ್ಯ ತೋರುವವರಿಗೆ ತಕ್ಕ ಶಾಸ್ತಿಯಾಗಬೇಕು ; ಎಚ್ಡಿಕೆ ಆಗ್ರಹ
5 - ಸಂಪುಟ ವಿಸ್ತರಣೆ: ಸಂಕ್ರಾಂತಿ ಮುಗಿದ ಬಳಿಕ ನಿರ್ಧಾರ?
ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರಿದಿದ್ದು ಇನ್ನೇನಿದ್ದರೂ ಸಂಕ್ರಾಂತಿ ಮುಗಿದ ಮೇಲಷ್ಟೇ ನಿರ್ಧಾರ ಆಗುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ನಡೆಸಬೇಕು ಎಂಬುವುದು ಸಚಿವಾಕಾಂಕ್ಷಿಗಳ ಬೇಡಿಕೆ ಆಗಿತ್ತು. ಆದರೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದ ಹಾಗಿಲ್ಲ.
ಶಿವಮೊಗ್ಗದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಆದರೆ ಸಭೆಯಲ್ಲಿ ಈ ಕುರಿತಾದ ಯಾವುದೇ ನಿರ್ಧಾರವನ್ನು ಕೈಗೊಳ್ಳದೆ ಇರುವುದು ಸಚಿವಾಕಾಂಕ್ಷಿಗಳಲ್ಲೂ ನಿರಾಸೆ ಮೂಡಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಹಾಗೂ ಜಂಟಿ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದು ಸಹಜ ಕುತೂಹಲ ಮೂಡಿಸಿತ್ತು. ಸಂಪುಟ ವಿಸ್ತರಣೆ ಕುರಿತಾಗಿ ಅರುಣ್ ಸಿಂಗ್ ಏನಾದರೂ ಸಂದೇಶ ಹೊತ್ತು ತರುತ್ತಾರಾ ಎಂಬ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇದ್ದರು.
ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ, ಪಕ್ಷ ಸಂಘಟನೆಯ ಬಗ್ಗೆ ಚರ್ಚೆ
6 - ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಆರೋಗ್ಯ ಸ್ಥಿತಿ ಸುಧಾರಣೆ
ಕೇಂದ್ರದ ರಸಗೊಬ್ಬರ ಖಾತೆ ಸಚಿವ, ಮಾಜಿ ಸಿಎಂ ಸದಾನಂದ ಗೌಡ ಆರೋಗ್ಯ ಸ್ಥಿರವಾಗಿದೆ. ಭಾನುವಾರ ಮಧ್ಯಾಹ್ನ ಚಿತ್ರದುರ್ಗದಲ್ಲಿ ಸದಾನಂದ ಗೌಡರು ಅಸ್ವಸ್ಥರಾಗಿದ್ದರು. ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುವ ವೇಳೆ ಚಿತ್ರದುರ್ಗದಲ್ಲಿ ಊಟ ಮಾಡಲು ಕಾರು ನಿಲುಗಡೆ ಮಾಡಲಾಗಿತ್ತು. ಈ ವೇಳೆ ಕಾರಿನಿಂದ ಇಳಿಯುವಾಗ ಸದಾನಂದ ಗೌಡರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಸದಾನಂದ ಗೌಡರು ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸದಾನಂದ ಗೌಡರು, ನನ್ನ ಆರೋಗ್ಯ ಸುಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮವಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ಗಳೂ ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ದಿಢೀರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
7 - ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಅವಹೇಳನ: ಕಲಾವಿದ ಫಾರೂಕಿ ಬಂಧನ
ಹಿಂದೂ ದೇವತೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಸ್ಟ್ಯಾಂಡ್ಅಪ್ ಕಮಿಡಿಯನ್ ಮುನಾವರ್ ಫಾರೂಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲದ ಮುನಾವರ್ ಜೊತೆಯಲ್ಲೇ, ಇನ್ನಿತರ ನಾಲ್ವರನ್ನೂ ಬಂಧಿಸಲಾಗಿದೆ. ಮುನಾವರ್ ಫಾರೂಕಿ ವಿರುದ್ಧ ಬಿಜೆಪಿ ಶಾಸಕಿಯ ಪುತ್ರ ದೂರು ದಾಖಲಿಸಿದ್ದರು. ಮಧ್ಯಪ್ರದೇಶದ ಇಂಧೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುನಾವರ್ ಅವಹೇಳನಾಕಾರಿಯಾಗಿ ಮಾತನಾಡಿದ್ದರು.
ಇಂಧೋರ್ನ ಡೂಕನ್ ಎಂಬ ಪ್ರದೇಶದಲ್ಲಿ ಇರುವ ಕೆಫೆಯೊಂದರಲ್ಲಿ ಈ ಕಾಮಿಡಿ ಕಾರ್ಯಕ್ರಮ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಈ ಕಾರ್ಯಕ್ರಮ ನಡೆದಿತ್ತು. ಶನಿವಾರ ಈ ಕಾರ್ಯಕ್ರಮದ ಸಂಘಟಕರು ಹಾಗೂ ಕಮಿಡಿಯನ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ.
ಹಾಸ್ಯದ ಎಲ್ಲೆ ಮೀರಿ ಅಪಹಾಸ್ಯವಾದಾಗ..! ಸ್ಟ್ಯಾಂಡ್ ಅಪ್ ಕಾಮಿಡಿ ಹೆಸರಲ್ಲಿ ಅಸಹ್ಯ..!
8 - ನಟ ಶನಿ ಮಹದೇವಪ್ಪ ಇನ್ನಿಲ್ಲ!
ಕನ್ನಡ ಚಿತ್ರರಂಗದಲ್ಲಿ 550ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಹಿರಿಯ ಪೋಷಕ ನಟ ಶನಿ ಮಹದೇವಪ್ಪ, ಭಾನುವಾರ (ಜ.3) ಸಂಜೆ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
'ಭಕ್ತ ಕುಂಬಾರ', 'ಶ್ರೀನಿವಾಸ ಕಲ್ಯಾಣ', 'ಕವಿರತ್ನ ಕಾಳಿದಾಸ' ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಶನಿ ಮಹದೇವಪ್ಪ ಅವರದ್ದು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದ ಅವರು, ಡಾ. ರಾಜ್ಕುಮಾರ್ ಅವರೊಂದಿಗೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಅಂತ್ಯ ಸಂಸ್ಕಾರವನ್ನು ಸೋಮವಾರ (ಜ.4) ಬೆಳಗ್ಗೆ ಸುಮನಹಳ್ಳಿಯ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಅವರಿಗೆ ಕೊರೊನಾ ಲಕ್ಷಣಗಳಿದ್ದ ಕಾರಣ ಅಂತಿಮ ದರ್ಶನಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ.
9 - ಬ್ರಿಸ್ಬೇನ್ ಟೆಸ್ಟ್ ಆಡಲು ಟೀಮ್ ಇಂಡಿಯಾ ಹಿಂದೇಟು..?
ಕ್ವೀನ್ಸ್ಲ್ಯಾಂಡ್ನಲ್ಲಿ ತರಲಾಗಿರುವ ಕೊರೊನಾ ವೈರಸ್ನ ನೂತನ ನಿಯಮಗಳನ್ನು ತಮ್ಮ ಮೇಲೂ ಹೇರುತ್ತಾರೆ ಎಂಬ ಭೀತಿಯಲ್ಲಿ ಇರುವ ಟೀಮ್ ಇಂಡಿಯಾ ಆಟಗಾರರು, ಬ್ರಿಸ್ಬೇನ್ನಲ್ಲಿ ನಡೆಯಬೇಕಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಬ್ರಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಜನವರಿ 15ರಿಂದ ನಡೆಯಬೇಕಿದೆ.
ಆದರೆ, ಭಾರತ ತಂಡ ಬ್ರಿಸ್ಬೇನ್ಗೆ ತೆರಳುವ ಆಸಕ್ತಿ ತೋರಿಲ್ಲ. ಏಕೆಂದರೆ ಅಲ್ಲಿಗೆ ತೆರಳಿದರೆ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಮಾತ್ರವೇ ತೆರಳುವ ಅನುಮತಿ ಇರಲಿದೆ. ಬಯೋ ಬಬಲ್ ಒಳಗೇ ಇರುವಂತಾಗುತ್ತದೆ. ಇದಕ್ಕೆ ಟೀಮ್ ಇಂಡಿಯಾ ತಯಾರಿಲ್ಲ ಎಂದು ಕ್ರಿಕ್ಬಝ್ ವರದಿ ಮಾಡಿದೆ.
10 - ಇಸ್ರೇಲ್ ಹೆಣೆದ ಯುದ್ಧ ಬಲೆಯಲ್ಲಿ ಬೀಳದಿರಿ: ಟ್ರಂಪ್ಗೆ ಇರಾನ್ ಸಲಹೆ!
ಇಸ್ರೇಲ್ ದೇಶ ಹೆಣೆದಿರುವ ಯುದ್ಧದ ಬಲೆಯಲ್ಲಿ ಅಮೆರಿಕ ಬೀಳದಿರಲಿ ಎಂದು ಇಸ್ರೇಲ್ ಸಲಹೆ ಸಮೇತ ಎಚ್ಚರಿಕೆ ನೀಡಿದೆ..! ನಿರ್ಗಮನದ ಹೊಸ್ತಿಲಲ್ಲಿ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸಲಹೆ ನೀಡಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್, ಯಾವುದೇ ಕಾರಣಕ್ಕೂ ಇಸ್ರೇಲ್ ಹೆಣೆದಿರುವ ಬಲೆಯಲ್ಲಿ ಬೀಳಬೇಡಿ ಎಂದಿದ್ದಾರೆ. ಇರಾಕ್ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಪಡೆಗಳ ಮೇಲೆ ದಾಳಿ ಮಾಡಲು ಇಸ್ರೇಲ್ ಸಂಚು ರೂಪಿಸಿದೆ. ಈ ದಾಳಿಗಳನ್ನು ಇರಾನ್ ನಡೆಸುತ್ತಿದೆ ಎಂದು ಬಿಂಬಿಸಲು ಹವಣಿಸುತ್ತಿದೆ. ಈ ಮೂಲಕ ಅಮೆರಿಕ-ಇರಾನ್ ನಡುವೆ ಯುದ್ಧವಾಗಲಿ ಎಂಬುದು ಇಸ್ರೇಲ್ ಕುತಂತ್ರ ಎಂದು ಮೊಹಮ್ಮದ್ ಜವಾದ್ ಜರೀಫ್ ಅಭಿಪ್ರಾಯಪಟ್ಟಿದ್ದಾರೆ.
ಇರಾನ್ನ ಉನ್ನತ ಸೇನಾ ಕಮಾಂಡರ್ ಖಾಸೀಂ ಸುಲೈಮಾನಿ ಅವರನ್ನು ಅಮೆರಿಕ ಹತ್ಯೆ ಮಾಡಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಇರಾನ್-ಅಮೆರಿಕ ನಡುವಿನ ಸಂಬಂಧ ತೀರ ಹದಗೆಟ್ಟಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಯುದ್ಧದ ಹೊಸ್ತಿಲಲ್ಲಿ ನಿಂತಿವೆ. ಹೀಗಾಗಿ, ಇರಾನ್ ದೇಶವು ಅಮೆರಿಕಕ್ಕೆ ಸಲಹೆ ನೀಡಿದೆ. ಇರಾನ್ನ ಈ ವಾದಕ್ಕೆ ತಿರುಗೇಟು ನೀಡುರುವ ಇಸ್ರೇಲ್ ‘ನಾನ್ಸೆನ್ಸ್’ ಎಂದಷ್ಟೇ ಪ್ರತಿಕ್ರಿಯೆ ನೀಡಿದೆ.
ಇರಾನ್ ಮೇಲೆ ದಾಳಿ ಮಾಡಲು ಮುಂದಾಗಿದ್ದ ಟ್ರಂಪ್: ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದೇಕೆ?