Please enable javascript.Tulu Constitution Shedule,ತುಳು ಭಾಷೆ 8ನೇ ಪರಿಚ್ಛೇದಕ್ಕೆ: ಟ್ವೀಟ್‌ ಅಭಿಯಾನ - tulu language to be included in the 8th schedule of the constitution - Vijay Karnataka

ತುಳು ಭಾಷೆ 8ನೇ ಪರಿಚ್ಛೇದಕ್ಕೆ: ಟ್ವೀಟ್‌ ಅಭಿಯಾನ

ವಿಕ ಸುದ್ದಿಲೋಕ | 8 Aug 2017, 11:18 am
Subscribe

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ಆಗ್ರಹ ಒಂದೂವರೆ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಆ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.

tulu language to be included in the 8th schedule of the constitution
ತುಳು ಭಾಷೆ 8ನೇ ಪರಿಚ್ಛೇದಕ್ಕೆ: ಟ್ವೀಟ್‌ ಅಭಿಯಾನ

-ವಿಜಯ ಕೋಟ್ಯಾನ್‌ ಮಂಗಳೂರು

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬ ಆಗ್ರಹ ಒಂದೂವರೆ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಆ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಜೈ ತುಳುನಾಡು ಯುವಪಡೆಗಳು ಒಂದಾಗಿದ್ದು, ಒಂದು ದಿನದ ಟ್ವೀಟ್‌ ಅಭಿಯಾನ ನಡೆಸಲು ನಿರ್ಧರಿಸಿದೆ.

ಈಗಾಗಲೇ ಇದಕ್ಕೆ ಬೇಕಾದ ಪೂರ್ವ ಸಿದ್ಧತೆ ನಡೆಸಲಾಗಿದ್ದು, ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಜೈ ತುಳುನಾಡು ರಿಜಿಸ್ಪ್ರೇಶನ್‌ ಆದ ತಂಡದಲ್ಲಿ 20 ಕ್ಕೂ ವಾಟ್ಸಪ್‌ ಗ್ರೂಪ್‌ಗಳು, 15ಕ್ಕೂ ಅಧಿಕ ಫೇಸ್ಬುಕ್‌ ಪೇಜ್‌ಗಳ ಮುಖಾಂತರ ಪ್ರಚಾರ ನಡೆಸಲಾಗುತ್ತಿದೆ. ಇದು ಮಾತ್ರವಲ್ಲದೆ ಆಡಿಯೋ ರೆಕಾರ್ಡ್‌ಗಳನ್ನು ಹರಿಯಬಿಡಲಾಗುತ್ತಿದೆ.

ದಿನವಿಡೀ ಅಭಿಯಾನ: ಆ.10ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಹಕ್ಕೊತ್ತಾಯ ನಡೆಯಲಿದ್ದು, ದೇಶಾದ್ಯಂತ 15ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಟ್ವೀಟ್‌ ಮಾಡಲು ಉದ್ದೇಶಿಸಲಾಗಿದೆ ಎಂದು ಅಭಿಯಾನದ ಮುಖ್ಯ ರೂವಾರಿ, ಜೈ ತುಳುನಾಡು ತಂಡದ ಅಧ್ಯಕ್ಷ ಅಶ್ವತ್ಥ್‌ ಹೇಳುತ್ತಾರೆ.

ಯುವಕರೇ ಹೆಚ್ಚು: ಜೈ ತುಳುನಾಡು ಟೀಮ್‌ನಲ್ಲಿ ಯುವಕರೇ ಹೆಚ್ಚಾಗಿದ್ದು, ದೊಡ್ಡ ಮಟ್ಟದಲ್ಲಿ ತುಳು ಭಾಷೆ ಪ್ರಚಾರ ನಡೆಸಲಾಗುತ್ತಿದೆ. ಟ್ವಿಟರ್‌ ಇಲ್ಲದವರಿಗೆ ಕೂಡಲೇ ಟ್ವಿಟರ್‌ ಖಾತೆ ತೆರೆಯುವಂತೆ ಸೂಚನೆ ನೀಡಲಾಗಿದೆ. ಉಡುಪಿ, ಬ್ರಹ್ಮಾವರ, ಪುತ್ತೂರು, ಮೂಲ್ಕಿ, ಬಂಟ್ವಾಳ, ಕಾರ್ಕಳ ಸೇರಿದಂತೆ ನಾನಾ ಕಡೆ ಪ್ರತ್ಯೇಕ ಗ್ರೂಪ್‌ ಮಾಡಿ ಪ್ರಚಾರ ನಡೆಸಲಾಗಿದ್ದು, ಕನಿಷ್ಠ 15ಸಾವಿರ ಟ್ವಿಟ್‌ ಮಾಡುವ ಉದ್ದೇಶ ಹೊಂದಲಾಗಿದೆ.

ತುಳುವಿಗೆ ಮಾತ್ರ ಹಿನ್ನಡೆ: ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಹಲವು ಭಾಷೆಗಳ ಜತೆ ಪೈಪೋಟಿಗೆ ನಿಂತಿದೆ. ಪಂಚ ದ್ರಾವಿಡ ಭಾಷೆಗಳಲ್ಲಿರುವ ಕನ್ನಡ, ಮಲಯಾಳ, ತಮಿಳು, ತೆಲುಗು ಈಗಾಗಲೇ 8ನೇ ಪರಿಚ್ಛೇದದಡಿ ಸೇರಿದ್ದರೂ ತುಳು ಭಾಷೆ ಮಾತ್ರ ಸೇರ್ಪಡೆಗೆ ಬಾಕಿಯುಳಿದಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ

ಟ್ವಿಟ್‌ ಅಭಿಯಾನಕ್ಕೆ ಸಂಬಂಧಿಸಿ ಆ.5ರಿಂದ ವಾಟ್ಸಪ್‌, ಫೇಸ್ಬುಕ್‌, ಟ್ವಿಟರ್‌ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಯುತ್ತಿದೆ. ವಿದೇಶದಲ್ಲಿರುವ ತುಳುವರಿಗೂ ಈ ಬಗ್ಗೆ ಸಂದೇಶ ಕಳುಹಿಸಲಾಗಿದೆ. ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿರುವ ತುಳುವರಿಗೆ ಈ ಬಗ್ಗೆ ಸಂದೇಶ ಕಳುಹಿಸಲಾಗುತ್ತಿದ್ದು, ಆಯಾಯ ರಾಜ್ಯ ಭಾಷೆಗಳಲ್ಲೇ ಕಳುಹಿಸುವಂತೆ ವಿನಂತಿ ಮಾಡಲಾಗಿದೆ. ಇದು ಮಾತ್ರವಲ್ಲದೆ ಇಂಗ್ಲೀಷ್‌, ಮಲೆಯಾಳಂ, ಕೊಂಕಣಿ, ಬ್ಯಾರಿ, ಕುಂದಗನ್ನಡ, ಕನ್ನಡ, ತೆಲುಗು, ಹಿಂದಿ, ತಮಿಳು, ಮರಾಠಿ ಸೇರಿದಂತೆ 15ಕ್ಕೂ ಅಧಿಕ ಭಾಷೆಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸುವಂತೆ ಸಂದೇಶದಲ್ಲಿ ಆಗ್ರಹಿಸಲಾಗಿದೆ.

ಟ್ವೀಟ್‌ ಅಭಿಯಾನವೇ ಯಾಕೆ ?

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆಂದು ಹಲವು ವರ್ಷದಿಂದ ಜನಪ್ರತಿನಿಧಿಗಳನ್ನು ಭೇಟಿಯಾಗಿ, ಮನವಿಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಆದರೆ ಈಗ ಟ್ವಿಟರ್‌ನಂತಹ ಸಾಮಾಜಿಕ ಜಾಲ ತಾಣವನ್ನು ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಬಳಕೆ ಮಾಡುತ್ತಿದ್ದು ಅದರ ಮುಖೇನವೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದಕ್ಕಾಗಿ ತುಳುವರೆಲ್ಲ ಸೇರಿ ಒಂದು ದಿನ ಟ್ವಿಟ್‌ ಅಭಿಯಾನ ನಡೆಸಲು ನಿರ್ಧರಿಸಿ ಆಡಳಿತ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಶ್ವತ್ಥ್‌ ಹೇಳುತ್ತಾರೆ.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂದು ದಶಕಗಳ ಕನಸಾಗಿದೆ. ಆದರೂ ಇನ್ನೂ ಆ ಕನಸು ನನಸಾಗಿಲ್ಲ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಒಂದೇ ದಿನ 15ಸಾವಿರಕ್ಕೂ ಹೆಚ್ಚು ಟ್ವಿಟ್‌ ಮಾಡುವ ಮೂಲಕ ಆಗ್ರಹ ವ್ಯಕ್ತಪಡಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ನಾನಾ ರೀತಿ ಪ್ರಚಾರಗಳು ನಡೆದಿವೆ.

-ಅಶ್ವತ್ಥ್‌, ಅಧ್ಯಕ್ಷರು, ಜೈ ತುಳುನಾಡು ಯುವಪಡೆ

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ