Please enable javascript.Rahuls Earthquake,ಮೋದಿ ಲಂಚ ಪಡೆದಿದ್ದಾರೆ ಎಂದ ರಾಹುಲ್: ಹಳೆ ದಾಖಲೆ, ಹೊಸ ಆರೋಪ ಎಂದ ಬಿಜೆಪಿ - modi got kickback from Sahara and birla: Rahul gandhi alleges - Vijay Karnataka

ಮೋದಿ ಲಂಚ ಪಡೆದಿದ್ದಾರೆ ಎಂದ ರಾಹುಲ್: ಹಳೆ ದಾಖಲೆ, ಹೊಸ ಆರೋಪ ಎಂದ ಬಿಜೆಪಿ

ಏಜೆನ್ಸೀಸ್ | 22 Dec 2016, 7:00 am
Subscribe

ಸಹಾರಾ, ಬಿರ್ಲಾ ಗ್ರೂಪ್‌ನಿಂದ ಕಿಕ್‌ಬ್ಯಾಕ್‌ ಆರೋಪ ಆಧಾರರಹಿತ, ನಾಚಿಕೆಗೇಡಿನ ಆಪಾದನೆ: ಬಿಜೆಪಿ ಪಿಟಿಐ ಹೊಸದಿಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ವೈಯಕ್ತಿಕ ಭ್ರಷ್ಟಾಚಾರ'ದ ...

modi got kickback from sahara and birla rahul gandhi alleges
ಮೋದಿ ಲಂಚ ಪಡೆದಿದ್ದಾರೆ ಎಂದ ರಾಹುಲ್: ಹಳೆ ದಾಖಲೆ, ಹೊಸ ಆರೋಪ ಎಂದ ಬಿಜೆಪಿ

ಸಹಾರಾ, ಬಿರ್ಲಾ ಗ್ರೂಪ್‌ನಿಂದ ಕಿಕ್‌ಬ್ಯಾಕ್‌ ಆರೋಪ

ಆಧಾರರಹಿತ, ನಾಚಿಕೆಗೇಡಿನ ಆಪಾದನೆ: ಬಿಜೆಪಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ವೈಯಕ್ತಿಕ ಭ್ರಷ್ಟಾಚಾರ'ದ ಬಗ್ಗೆ ತನ್ನ ಬಳಿ ದಾಖಲೆ ಇದೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಮೋದಿ ಅವರ ತವರು ನೆಲದಲ್ಲೇ ಲಂಚಾರೋಪದ ಬಾಣ ಪ್ರಯೋಗಿಸಿದ್ದಾರೆ.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸಹಾರಾ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ ಉದ್ಯಮ ಸಂಸ್ಥೆಗಳಿಂದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು ಮತ್ತು ಈ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದರು.

ಗುಜರಾತ್‌ನ ಮೆಹ್ಸಾನಾದಲ್ಲಿ ನಡೆದ ರಾಯಲಿಯಲ್ಲಿ ಈ ಆರೋಪ ಮಾಡಿದ್ದು, ಬಿಜೆಪಿ ಇದನ್ನು ಸಂಪೂರ್ಣ ಸುಳ್ಳು, ಆಧಾರರಹಿತ, ಮಾನಹಾನಿಕರ, ನಾಚಿಕೆಗೇಡಿನ ಆಪಾದನೆ ಎಂದು ಖಂಡಿಸಿದೆ. ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಪ್ರಕರಣದ ತನಿಖೆ ವೇಳೆ ಕಾಂಗ್ರೆಸ್‌ ನಾಯಕರು ಮತ್ತು 'ಕುಟುಂಬ'ದ ಹೆಸರುಗಳು ಕೇಳಿಬರುತ್ತಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ತಂತ್ರ ಹೆಣೆಯಲಾಗಿದೆ ಎಂದು ಬಿಜೆಪಿ ಹೇಳಿದೆ.

ಭೂಕಂಪ ಹೇಳಿಕೆ: ತನ್ನ ಬಳಿ ಪ್ರಧಾನ ಮಂತ್ರಿ ಅವರ ವೈಯಕ್ತಿಕ ಭ್ರಷ್ಟಾಚಾರದ ದಾಖಲೆಗಳಿವೆ. ತಾನು ಮಾತನಾಡಿದರೆ 'ಭೂಕಂಪ'ವಾಗುತ್ತದೆ ಎಂಬ ಕಾರಣಕ್ಕಾಗಿಯೇ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಇದಾದ ಬಳಿಕ ಹಲವು ಕಡೆ ಭಾಷಣ ಮಾಡಿದರೂ 'ಭೂಕಂಪ'ವಾಗುವ ಆರೋಪ ಮಾಡಿರಲಿಲ್ಲ.

ಇದೀಗ ಈ ಆರೋಪವೂ ಗಟ್ಟಿತನ ಹೊಂದಿಲ್ಲ. ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬಿತ್ಯಾದಿ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ರಾಹುಲ್‌ ಆರೋಪಗಳೇನು?

* ಸಹಾರಾ ಸಂಸ್ಥೆ 2012ರ ಅಕ್ಟೋಬರ್‌ನಿಂದ 2014ರ ಫೆಬ್ರವರಿ ನಡುವೆ ಮೋದಿ ಅವರಿಗೆ 9 ಬಾರಿ ಹಣ ಪಾವತಿಸಿದೆ.

* ಬಿರ್ಲಾ ಗ್ರೂಪ್‌ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 12 ಕೋಟಿ ರೂ. ಪಾವತಿಸಿದೆ.

* ಈ ಪ್ರಕರಣದ ಬಗ್ಗೆ ಇದುವರೆಗೂ ಯಾಕೆ ತನಿಖೆ ನಡೆದಿಲ್ಲ?

ಕೊಡುವ ದಾಖಲೆ ಯಾವುದು?

*ಸಹಾರಾ ಮತ್ತು ಬಿರ್ಲಾ ಗ್ರೂಪ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2014ರ ನವಂಬರ್‌ 22ರಂದು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳು.

* ಅದರಲ್ಲಿ 'ಟು ಗುಜರಾತ್‌ ಸಿಎಂ' ಎಂಬ ಉಲ್ಲೇಖವಿದೆ ಎನ್ನಲಾಗುತ್ತಿದೆ.

* ದಾಖಲೆಗಳಲ್ಲಿ ಹಲವಾರು ಪ್ರಮುಖ ರಾಜಕಾರಣಿಗಳಿಗೆ ದೊಡ್ಡ ಮೊತ್ತದ ಹಣ ನೀಡಿದ ಮಾಹಿತಿಯೂ ಇದೆ ಎಂದು ಹೇಳಲಾಗುತ್ತಿದೆ.

ಆಗಸ್ಟಾ ವೆಸ್ಟ್‌ ಲ್ಯಾಂಡ್‌ ತನಿಖೆ ದಿಕ್ಕುತಪ್ಪಿಸುವ ಯತ್ನ: ಬಿಜೆಪಿ

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ತನಿಖೆ ವೇಳೆ ತನ್ನ ಕುಟುಂಬಿಕರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ರಾಹುಲ್‌ ಗಾಂಧಿ ಇಂಥ ಆಧಾರರಹಿತ, ನಾಚಿಕೆಗೇಡಿನ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಜನ ಕಾಂಗ್ರೆಸ್‌ ನಾಯಕತ್ವವನ್ನು ನಿರಾಕರಿಸಿದ್ದಾರೆ. ಅದು ಪಾಲಿಕೆಗಳ ಆಡಳಿತ ವಹಿಸಲೂ ಅನರ್ಹ ಎಂಬ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟವಾಗಿದೆ. ಈ ಸೋಲಿನ ಹತಾಶೆಯಿಂದ ರಾಹುಲ್‌ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಮೋದಿ ಗಂಗೆಯಷ್ಟೇ ಪವಿತ್ರ: ರವಿಶಂಕರ್‌ ಪ್ರಸಾದ್‌

ದೇಶ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನೇ ನಿಲ್ಲಿಸಿಬಿಟ್ಟಿದೆ. ಅವರೊಬ್ಬ ಬೀದಿಯಲ್ಲಿ ಬೊಬ್ಬೆ ಹೊಡೆಯುವ ವ್ಯಕ್ತಿ. ಅವರು ಹೇಳುವುದರಲ್ಲಿ ಯಾವ ವಿಷಯವೂ ಇಲ್ಲ

- ಜಿವಿಎಲ್‌ ನರಸಿಂಹ ರಾವ್‌, ಬಿಜೆಪಿ ವಕ್ತಾರ

ರಾಹುಲ್‌ ನುಡಿ

* ರಾಷ್ಟ್ರದ ಪರವಾಗಿ ನಾನು ಈ ವಿಷಯವನ್ನು ಎತ್ತುತ್ತಿದ್ದೇನೆ. ಪ್ರಧಾನಿ ವಿರುದ್ಧದ ಪ್ರಶ್ನೆಗಳಿಗೆ ರಾಷ್ಟ್ರ ಉತ್ತರ ಬಯಸುತ್ತಿದೆ.

* ಮೋದಿ ಒಂದು ಕಡೆ ಲಂಚ ತೆಗೆದುಕೊಳ್ಳುತ್ತಾರೆ. ಇನ್ನೊಂದು ಕಡೆ ಕಾಳಧನ ವಿರುದ್ಧದ ಹೋರಾಟದ ಹೆಸರಿನಲ್ಲಿ ನೋಟು ಅಮಾನ್ಯತೆಯ ಮೂಲಕ ಜನರ ಮೇಲೆ ಸವಾರಿ ಮಾಡುತ್ತಾರೆ.

ಸುಪ್ರೀಂ ಕೋರ್ಟ್‌ ತಿರಸ್ಕರಿಸಿದ್ದ ಹಳೆ ದಾಖಲೆ, ಹೊಸ ಆರೋಪ

ಬಿರ್ಲಾ ಮತ್ತು ಸಹಾರಾ ಕಂಪನಿಗಳ ಐಟಿ ದಾಖಲೆಗಳನ್ನು ಆಧರಿಸಿ ಆರೋಪ ಮಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ ತಿಂಗಳು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೂಡಾ ಇಂತಹುದೇ ಆರೋಪ ಮಾಡಿದ್ದರು.

ಈ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ ನೇಮಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸು.ಕೋರ್ಟ್‌ನಲ್ಲಿ ದಾಖಲಾಗಿತ್ತು. ಆದರೆ, ನ್ಯಾಯಮೂರ್ತಿಗಳಾದ ಜೆ.ಎಸ್‌. ಖೇಹರ್‌ ಮತ್ತು ಅರುಣ್‌ ಮಿಶ್ರಾ ಅವರನ್ನು ಒಳಗೊಂಡ ಪೀಠ ಈ ದಾಖಲೆಗಳು ಬರೀ 'ಹವಾಲಾ ಪೇಪರ್‌ಗಳು', 'ಯಾವುದೇ ಸತ್ವವಿಲ್ಲ', 'ಬರೀ ಸಂಜ್ಞೆಗಳು' ಮಾತ್ರ ಎಂದು ಹೇಳುವ ಮೂಲಕ ಅರ್ಜಿ ವಿಚಾರಣೆಗೇ ನಿರಾಕರಿಸಿತ್ತು.

ಕಾಮನ್‌ ಕಾಸ್‌ ಎಂಬ ಎನ್‌ಜಿಒ ಸಲ್ಲಿಸಿದ್ದ ಪಿಐಎಲ್‌ನ್ನು ವಿಚಾರಣೆ ನಡೆಸಿದ ಪೀಠ, ಪ್ರಧಾನ ಮಂತ್ರಿ ಮೇಲೆ ಆಪಾದನೆ ಇದೆಯೇ ಹೊರತು ಸಾಕ್ಷ್ಯವಿಲ್ಲ ಎಂದು ಹೇಳಿತ್ತು.

ಮತ್ತು ಸಾಕ್ಷ್ಯಗಳನ್ನು ಒದಗಿಸಿದರೆ ಮಾತ್ರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಬೇಕೇ ಬೇಡವೇ ಎಂದು ತೀರ್ಮಾನಿಸುವುದಾಗಿ ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ತಿಳಿಸಿತ್ತು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ